ಔಷಧ ವ್ಯಾಪಾರಿಗಳಿಂದ – ರಕ್ತದಾನ ಶಿಬಿರ.
ಇಲಕಲ್ಲ ಜ.24

ಅಗತ್ಯ ಸಮಯದಲ್ಲಿ ರಕ್ತವನ್ನು ಪೂರೈಸುವುದ ರಿಂದ ರೋಗಿಗಳ ಪ್ರಾಣವನ್ನು ಉಳಿಸಬಹುದು, ರಕ್ತದಾನವು ಅತ್ಯಂತ ಶ್ರೇಷ್ಠ ದಾನವಾಗಿದೆ ಎಂದು ಡಾ, ಸುನಿತಾ ಕಠಾರಿ ಅಭಿಪ್ರಾಯಪಟ್ಟರು. ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘವು ನೀಡಿದ ಕರೆಯ ಮೇರೆಗೆ ಇಲ್ಲಿಯ ವಿಜಯ ಮಹಾಂತ ರಕ್ತ ಕೇಂದ್ರದಲ್ಲಿ ತಾಲೂಕಾ ಮಟ್ಟದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಹುನಗುಂದ ಹಾಗೂ ಇಳಕಲ್ ತಾಲೂಕಿನ ಔಷಧ ವ್ಯಾಪಾರಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸಂಘದ ರಾಷ್ಟ್ರೀಯ ಅಧ್ಯಕ್ಷ ಜಗನ್ನಾಥ ಶಿಂಧೆ ಅವರ 75 ನೇ. ಜನ್ಮ ದಿನೋತ್ಸವವನ್ನು ರಕ್ತದಾನದ ಮೂಲಕ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಶಸ್ತಿ ವಿಜೇತ ಶಿಕ್ಷಕರಾದ ಬಾಲಕೃಷ್ಣ ಗಜೇಂದ್ರಗಡ ಅವರು “ರಕ್ತದಾನವು ಸಾಮಾಜಿಕ ಜವಾಬ್ದಾರಿಯಾಗಿದೆ ಇದರಿಂದ ವಸುಧೈವ ಕುಟುಂಬಕಮ್ ಎಂಬ ವಿಶ್ವ ಪ್ರಜ್ಞೆಯು ಬೆಳೆಯುತ್ತದೆ” ಎಂದು ಹೇಳಿದರು.

ರಕ್ತದಾನ ಮಾಡಿದ ಮಹನೀಯರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಕರ್ನಾಟಕ ರಾಜ್ಯ ಔಷಧ ವ್ಯಾಪಾರಿಗಳ ಸಂಘವು ರಾಜ್ಯಾದ್ಯಂತ ನಡೆದಿರುವ ಕಾರ್ಯಕ್ರಮಗಳ ಉಸ್ತುವಾರಿಯನ್ನು ವಹಿಸಿತ್ತು. ಡಾ, ಎಂ.ಬಿ. ಗೊಂಗಡಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಕಾರ್ಯದರ್ಶಿ ಬಂಡುರಾವ್ ಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ರಕ್ತದಾನದ ಅಗತ್ಯವನ್ನು ಸಭೆಗೆ ತಿಳಿಸಿದರು. ಗೋಪಾಲ ಢಗೆ ಅವರು ಪ್ರಾರ್ಥನೆ ಹಾಡಿದರು, ಗುರುದತ್ತ ಗುಳೇದ ವಂದನಾರ್ಪಣೆ ಮಾಡಿದರು, ಮಹಾಂತೇಶ ಹಳ್ಳೂರ ನಿರೂಪಣೆ ಮಾಡಿದರು. ಸಮಾರಂಭದಲ್ಲಿ ಶಿವಣ್ಣ ಅಕ್ಕಿ, ಅನ್ನದಾನಿ ಹಾದಿಮನಿ, ಶರಣಬಸಪ್ಪ ಗಣಾಚಾರಿ, ಪ್ರಭು ಬೀಳಗಿ ಮುಂತಾದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ