ಸೂಪರ್ ಮಾರುಕಟ್ಟೆ ಕಾಂಪೌಂಡ್, ಪಿಲ್ಲರುಗಳಲ್ಲಿ ಬಿರುಕು – ಕಳಪೆ ಕಾಮಗಾರಿ ಆರೋಪ.

ಗದಗ ಏ.30

ಬೆಟಗೇರಿ ಅವಳಿ ನಗರದಲ್ಲಿ ಎರಡು ಮೂರು ದಿನಗಳ ಹಿಂದೆ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಬೆಟಗೇರಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸೂಪರ್ ಹೈಟೆಕ್ ತರಕಾರಿ ಮಾರುಕಟ್ಟೆಯ ಕಾಂಪೌಂಡ್ ಬಿರುಕು ಬಿಟ್ಟಿದೆ. ಪಿಲ್ಲರಗಳು ಬಿರುಕು ಬಿಟ್ಟುವಾಲಿವೆ. ಅಲ್ಲಿರುವ ನೂರಾರು ಮಂದಿ ತರಕಾರಿ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿ. ಕಳಪೆ ಕಾಮಗಾರಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ನಗರ ಸಭೆ ವತಿಯಿಂದ ಅಂದಾಜು 2₹ ಕೋಟಿ ರೂ ವೆಚ್ಚದಲ್ಲಿ ಸೂಪರ್ ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡಿದ್ದು, 120 ವ್ಯಾಪಾರ ಮಳಿಗೆಗಳಿವೆ. ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಿತ್ತು. ಇದೀಗ ಮಾರುಕಟ್ಟೆ ಪಿಲ್ಲರುಗಳು ಬಿರುಕು ಬಿಟ್ಟಿರುವುದರಿಂದ ವ್ಯಾಪಾರಸ್ಥರಲ್ಲಿ, ಮಾರುಕಟ್ಟೆಗೆ ಬರುವ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.ಪಿಲ್ಲರ್ ಗಳಿಗೆ ಅಳವಡಿಸಲಾದ ತಗಡುಗಳನ್ನು ಸದ್ಯ ತೆರವು ಗೊಳಿಸಲಾಗಿದ್ದು, ಮಾರುಕಟ್ಟೆ ಸುತ್ತಲೂ ಬ್ಯಾರಿಕೇಡ್ ಅಳವಡಿಸಲಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಪಿಲ್ಲರ್‌ಗಳು ಯಾವಾಗ ಕುಸಿದು ಬಿಡುತ್ತವೆ ಎಂಬ ಭಯ ವ್ಯಾಪಾರಸ್ಥರನ್ನು ಕಾಡ ಲಾರಂಭಿಸಿದೆ.

ನಗರ ಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮಾರುಕಟ್ಟೆ ಉದ್ಘಾಟನೆಯಾಗಿ ಏಳೇ ತಿಂಗಳಿಗೆ ಪಿಲ್ಲರುಗಳು ವಾಲಿವೆ. ತಾತ್ಕಾಲಿಕವಾಗಿ ಪ್ರತಿ ಪಿಲ್ಲರಿಗೂ ತಂತಿಯನ್ನು ಬಿಗಿಯಲಾಗಿದೆ. ಇಷ್ಟು ದೊಡ್ಡ ಮಾರುಕಟ್ಟೆಯ ಕಟ್ಟಡವನ್ನು ಭಾರ ಹೊರುವಷ್ಟು ಪಿಲ್ಲರ್‌ಗಳಲ್ಲಿ ಸಾಮರ್ಥ್ಯ ಇಲ್ಲ. ಸಾಮಾನ್ಯ ಮನೆಗಳಿಗೆ ಇರುವ ಪಿಲ್ಲ‌ರ್ ಪ್ರಮಾಣದಲ್ಲಿ ನಿರ್ಮಿಸಲಾಗಿದೆ. ಹೀಗಿದ್ದಾಗ ಭಾರ ಹೊರಲು ಹೇಗೆ ಸಾಧ್ಯ ಇಡೀ ಮಾರುಕಟ್ಟೆಯ ಕಟ್ಟಡವೇ ಕಳಪೆ ಕಾಮಗಾರಿ ಯಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು.ಬಿರುಗಾಳಿ ಸಹಿತ ಮಳೆಗೆ ಬಿರುಕು ಬಿಟ್ಟ ಪಿಲ್ಲರುಗಳು ವಾಲುತ್ತಿರುವುದ ರಿಂದ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಸ್ಥರು ಮಾರುಕಟ್ಟೆಯ ಮುಂದಿನ ಬಯಲು ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದು ಮಳೆ ಯಾದರೆ ವ್ಯಾಪಾರ ಮಾಡಲು ತೊಂದರೆ ಆಗುತ್ತದೆ. ಈ ರೀತಿ ಮಾರುಕಟ್ಟೆ ಕಳಪೆ ಕಾಮಗಾರಿ ಮಾಡಿದ್ದರಿಂದ ಬೀದಿಗೆ ಬಂದಿದ್ದೇವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.ಗದಗ-ಬೆಟಗೇರಿಯ ಸೂಪರ್ ಹೈಟೆಕ್ ತರಕಾರಿ ಮಾರುಕಟ್ಟೆಯಲ್ಲಿ ಕಾಣಿಸಿ ಕೊಂಡಿರುವ ಬಿರುಕುಗಳು ಕೇವಲ ಕಟ್ಟಡದ ತಾಂತ್ರಿಕ ದೌರ್ಬಲ್ಯವಲ್ಲ, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಸ್ಥಿರ ಕಾಮಗಾರಿಗಳ ಕಳಪೆ ಗುಣಮಟ್ಟದ ಸಂಕೇತವೂ ಆಗಿದೆ. ನೂರಾರು ವ್ಯಾಪಾರಿಗಳ ದಿನ ನಿತ್ಯದ ಬದುಕಿಗೆ ಆಧಾರವಾದ ಈ ಮಾರುಕಟ್ಟೆಯ ಭದ್ರತೆ ಸವಾಲು ಎದುರಿಸುತ್ತಿರುವುದು ಆತಂಕಕಾರಿ. ಸಾರ್ವಜನಿಕ ಹಣದ ಸರಿಯಾದ ಬಳಕೆ, ಕಟ್ಟಡದ ಗುಣಮಟ್ಟದ ಮೇಲ್ವಿಚಾರಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣದ ಕ್ರಮ ಅಗತ್ಯವಾಗಿದೆ. ಬಿರುಗಾಳಿ-ಮಳೆಯೆಂದು ಕಾರಣ ಹೇಳದೆ ಇದನ್ನು ಒಂದು ಎಚ್ಚರಿಕೆ ಎಂದು ಪರಿಗಣಿಸಿ, ಭವಿಷ್ಯದಲ್ಲಿ ಇಂತಹ ಅಪಾಯಗಳು ಉಂಟಾಗದಂತೆ ಕ್ರಮ ಕೈಗೊಳ್ಳ ಬೇಕಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button