ಶ್ರೀಮದ್ ರಾಮಾಯಣ ಮತ್ತು ಮಹಾಭಾರತಗಳು ಭಾರತದ ಮಹಾನ್ ಚರಿತ್ರೆಯಾಗಿವೆ – ಕುಮಾರಿ ಬಿಂದು ಶ್ರೀ ಅನಿಸಿಕೆ.
ಚಳ್ಳಕೆರೆ ಏ.14

ಶ್ರೀಮದ್ ರಾಮಾಯಣ ಮತ್ತು ಮಹಾಭಾರತಗಳೆಂಬ ಮಹಾಕಾವ್ಯಗಳು ಭಾರತದ ಮಹಾನ್ ಚರಿತ್ರೆಯಾಗಿವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಶಾರದಾ ಬಾಲಕ ಸಂಘದ ವಿದ್ಯಾರ್ಥಿನಿ ಕುಮಾರಿ ಬಿಂದುಶ್ರೀ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು “ಶ್ರೀಮದ್ ರಾಮಾಯಣದ ಬಾಲಖಂಡ”ದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ನಾರದಾ ಮಹರ್ಷಿಗಳಿಂದ ಹೇಳಲ್ಪಟ್ಟು ಮಹರ್ಷಿ ವಾಲ್ಮೀಕಿಗಳಿಂದ ರಚಿಸಲ್ಪಟ್ಟ ರಾಮಾಯಣ ಮಹಾಕಾವ್ಯವು ಒಟ್ಟು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳನ್ನು ಬಾಲಖಂಡ, ಅಯೋಧ್ಯಾಖಂಡ, ಕಿಷ್ಕಿಂಧಾ ಖಂಡ, ಅರಣ್ಯಖಂಡ, ಯುದ್ಧಖಂಡ, ಸುಂದರಖಂಡ, ಉತ್ತರಖಂಡಗಳೆಂಬ ಏಳು ಖಂಡಗಳನ್ನು ಒಳಗೊಂಡಿದ್ದು ಅದರಲ್ಲಿ ಶ್ರೀರಾಮನ ಬಾಲ್ಯ ಜೀವನದ ವಿವರಣೆ ನೀಡುವ ಬಾಲಖಂಡವು ರಾಮಾಯಣದ ಬಗ್ಗೆ ಪೀಠಿಕೆ ರೂಪದ ಚರಿತ್ರೆಯನ್ನು ತಿಳಿಸುತ್ತದೆ ಎಂದು ಬಾಲಖಂಡದ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.
ಶಿಬಿರದ ಪ್ರಯುಕ್ತ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳ ಪಠಣ, ಅಮ್ಮಾ ಶಾರದಾಮಾತೆ, ಯತೀಶ್ ಎಂ ಸಿದ್ದಾಪುರ ಅವರು “ಜಯ ದುರ್ಗಾ” ನಾಮಾವಳಿ ಹೇಳಿ ಕೊಟ್ಟರೆ ಸಂತೋಷ್ ಕುಮಾರ್ ಅವರು ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸಿದರು.
ತರಗತಿಯಲ್ಲಿ ಪೂಜ್ಯ ಮಾತಾಜೀ ತ್ಯಾಗಮಯೀ, ಸುಧಾಮಣಿ, ಡಾ, ಭೂಮಿಕ ಅದ್ವೈತ್, ವಿವಿಕ್ತ, ವಶಿಷ್ಠಾ, ಜಶ್ವಿತಾ, ಲಕ್ಷ್ಮೀ, ಯಶಸ್, ನೇಹ, ಹರ್ಷವರ್ಧನ್, ಚರಣ್ಯ, ಸಂಜನಾ, ಭೂಮಿಕಾ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

