ತಿರುವಣ್ಣಾಮಲೈ ತಮಿಳುನಾಡಿನಲ್ಲಿ ಚಿತ್ತಿರೈ – ಪೌರ್ಣಮಿ ಹಬ್ಬ ಆಚರಣೆ..!
ಬೆಂಗಳೂರು ಮೇ.04

ತಿರುವಣ್ಣಮಲೈ (ತಮಿಳುನಾಡು) ಇಲ್ಲಿ ಚಿತ್ತಿರೈ ಮಾಸ ಪೌರ್ಣಮಿ ದಿನ ಗಿರಿವಲಂ ಏಪ್ರಿಲ್ 30 ರ ರಾತ್ರಿ 9:12 ಕ್ಕೆ ಪ್ರಾರಂಭವಾಗಿ ಮೇ 1 ರ ರಾತ್ರಿ 10:52 ಕ್ಕೆ ಮುಕ್ತಾಯ ಗೊಳ್ಳಲಿದೆ.
ತಮಿಳುನಾಡಿನ ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಈ ಪವಿತ್ರ ದಿನದಂದು ಲಕ್ಷಾಂತರ ಭಕ್ತರು 14 ಕಿ.ಮೀ ಗಿರಿ ಪ್ರದಕ್ಷಿಣೆ ಮಾಡುತ್ತಾರೆ. ಚಿತ್ತಿರೈ ಪೌರ್ಣಮಿ ವರ್ಷದ ಅತ್ಯಂತ ಪ್ರಮುಖ ಪೌರ್ಣಮಿ. ಈ ದಿನ ಗಿರಿ ಪ್ರದಕ್ಷಿಣೆ ಮಾಡುವುದು ವಿಶೇಷ ಪುಣ್ಯವೆಂದು ಭಾವಿಸಲಾಗಿದೆ.
ಚಿತ್ತಿರೈ ಮಾಸ ಪೌರ್ಣಮಿ ದಿನ ಅರುಣಾಚಲ ಶಿವನಿಗೆ ಅತ್ಯಂತ ಪವಿತ್ರವಾದ ದಿನವಾಗಿದೆ. ತಿರುವಣ್ಣಾಮಲೈ ಅರುಣಾಚಲೇಶ್ವರ ದೇವಸ್ಥಾನದಲ್ಲಿ ಅಣ್ಣಾಮಲೈಯಾರ್ ಉಣ್ಣಾಮಲೈಯಾರ್ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮತ್ತು ಪೂಜೆ ನಡೆಯುತ್ತದೆ.
ತಿರುವಣ್ಣಾಮಲೈಯಲ್ಲಿರುವ ಅಣ್ಣಾಮಲೈಯಾರ್ ಮತ್ತು ಉಣ್ಣಾಮಲೈಯಾರ್ ಸ್ವಾಮಿ ತಮಿಳುನಾಡಿನ ಅರುಣಾಚಲೇಶ್ವರ ದೇವಸ್ಥಾನದ ಪ್ರಮುಖ ದೇವತೆಗಳು. ಶಿವನನ್ನು ಅಣ್ಣಾಮಲೈಯಾರ್ (ಅರುಣಾಚಲೇಶ್ವರ) ಎಂದೂ ಪಾರ್ವತಿಯನ್ನು ಉಣ್ಣಾಮಲೈ ಅಮ್ಮನ್ ಎಂದೂ ಕರೆಯಲಾಗುತ್ತದೆ.

ಇದು ಪಂಚಭೂತ ಸ್ಥಳಗಳಲ್ಲಿ ಅಗ್ನಿಸ್ಥಳವಾಗಿದೆ. ಇದು ತಮಿಳುನಾಡು ರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳ ಪೈಕಿ ಒಂದಾಗಿದೆ. ತಿರುವಣ್ಣಾಮಲೈ’ ಮತ್ತು `ಅರುಣಾಚಲ’ ಹೆಸರುಗಳು “ಪವಿತ್ರ ಅಗ್ನಿ ಬೆಟ್ಟ” ವನ್ನು ಸೂಚಿಸುತ್ತವೆ. (Chitra Pournami) 2026 ರಲ್ಲಿ ಮೇ 1 ರಂದು ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ಅತಿ ಹೆಚ್ಚು ಭಕ್ತರು ಬರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವುದು ದರ್ಶನಕ್ಕೆ ಮತ್ತು ವಾಹನ ಪಾರ್ಕಿಂಗ್ ಸ್ಥಳಗಳನ್ನು ತಿಳಿದು ಕೊಳ್ಳುವುದು ಒಳ್ಳೆಯದು.
ತಿರುವಣ್ಣಾಮಲೈ ಕ್ಷೇತ್ರ:-
ತಿರುವಣ್ಣಾಮಲೈ ದೇವಸ್ಥಾನಕ್ಕೆ ಬೆಂಗಳೂರಿನಿಂದ ಹೊಸೂರು, ಕೃಷ್ಣಗಿರಿ ಚೆಂಗಂ ಮೂಲಕ ಸುಲಭವಾಗಿ ಬಸ್ಸುಗಳಲ್ಲಿ ತೆರಳಬಹುದು. ಬೆಂಗಳೂರಿನಿಂದ 221 ಕಿ.ಮೀ ಹಾಗೂ ಚೆನ್ನೈ ನಗರದಿಂದ 185 ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ತಿರುವಣ್ಣಾಮಲೈ ಅಣ್ಣಾಮಲೈ ಬೆಟ್ಟಗಳ ಬುಡದಲ್ಲಿ ರೂಪ ಗೊಂಡ ಪಟ್ಟಣವಾಗಿದೆ. ಈ ಎರಡೂ ಪ್ರಮುಖ ನಗರಗಳಿಂದ ಇಲ್ಲಿಗೆ ರಸ್ತೆಯ ಮೂಲಕ ಸುಲಭವಾಗಿ ತೆರಳ ಬಹುದಾಗಿದೆ. ತಿರುವಣ್ಣಾಮಲೈಯಲ್ಲಿ ಹುಣ್ಣಿಮೆಯ ದಿನ ಗಿರಿವಲಂ ನಡೆಯುತ್ತದೆ. ಗಿರಿವಲಂ ಅಂದರೆ ಈ ಪವಿತ್ರ ಬೆಟ್ಟ ಗುಡ್ಡದ ಸುತ್ತ ಪ್ರದಕ್ಷಿಣೆ ಹಾಕುವುದು.

ಇದಕ್ಕಾಗಿ ರಸ್ತೆಯ ಮಾರ್ಗವಿದ್ದು ಭಕ್ತಾದಿಗಳು ಈ ಬೆಟ್ಟವನ್ನು ಸುಮಾರು 14 ಕಿ.ಮೀ ಕಾಲ್ನಡಿಗೆಯಲ್ಲಿ ಚಲಿಸಿ ಪ್ರದಕ್ಷಿಣೆ ಹಾಕಬಹುದು. ಕಲಿಯುಗದ ಈ ಒಂದು ಪ್ರದಕ್ಷಿಣೆಯು ಸಾವಿರ ಕುದುರೆ ತ್ಯಾಗಕ್ಕೆ ಸಮ ಎಂದು ಹೇಳಲಾಗಿದೆ ಹಾಗೂ ನಿರಂತರ ಭೇಟಿ ಹಾಗೂ ಪ್ರದಕ್ಷಿಣೆಯಿಂದ ಜೀವನ್ಮರಣಗಳ ಕಾಲ ಚಕ್ರದಿಂದ ಮುಕ್ತಿ ಪಡೆಯಬಹುದು ಎಂದೂ ಸಹ ಹೇಳಲಾಗಿದೆ. ಇಲ್ಲಿರುವ ಎಂಟು ಶಿವಲಿಂಗಗಳು ಹಾಗೂ ಅವುಗಳನ್ನು ಪೂಜಿಸುವುದರಿಂದ ದೊರಕುವ ಫಲಗಳು.
– ಶಿವಲಿಂಗಗಳು ದಿಕ್ಕು ಸ್ಥಾಪಿಸಿದವರು ಅಧಿಪತಿ ಪ್ರತಿ ಫಲಗಳು.
1. ಇಂದ್ರ ಲಿಂಗಂ ಪೂರ್ವ ಇಂದ್ರ, ಆಕಾಶ ದೇವತೆಗಳ ದೊರೆ ಸೂರ್ಯ ಹಾಗೂ ಶುಕ್ರ ಆಯುಷ್ಯ ವೃದ್ಧಿ ಹಾಗೂ ಪ್ರಸಿದ್ಧಿ.
2. ಅಗ್ನಿ ಲಿಂಗಂ ನೈರುತ್ಯ ಅಗ್ನಿ ದೇವ ಚಂದ್ರ ಭಯ ಹಾಗೂ ರೋಗಗಳಿಂದ ಮುಕ್ತಿ.
3. ಯಮ ಲಿಂಗಂ ದಕ್ಷಿಣ ಯಮ ದೇವ ಮಂಗಳ ಸುದೀರ್ಘ ಜೀವನ.
4. ನಿರುತಿ ಲಿಂಗಂ ಆಗ್ನೇಯ ನಿರುತಿ ದೈತ್ಯಗಳ ದೊರೆ ರಾಹು ಆರೋಗ್ಯ, ಭಾಗ್ಯ, ಸಂತಾನ ಪ್ರಾಪ್ತಿ.
5. ವರುಣ ಲಿಂಗಂ ಪಶ್ಚಿಮ ವರುಣ ದೇವರು ಶನಿ ನೀರು ಸಂಬಂಧಿ ಕಾಯಿಲೆಗಳಿಂದ ಮುಕ್ತಿ.
6. ವಾಯು ಲಿಂಗಂ ವಾಯವ್ಯ ವಾಯು ದೇವರು ಕೇತು ಶ್ವಾಸಕೋಶ, ಹೃದಯ ಸಂಬಂಧಿ ತೊಂದರೆಗಳಿಂದ ಮುಕ್ತಿ.
7. ಕುಬೇರ ಲಿಂಗಂ ಉತ್ತರ ಕುಬೇರ ಗುರು ಧನ ಪ್ರಾಪ್ತಿ ಹಾಗೂ ಪ್ರತಿಷ್ಠೆ.
8. ಈಶಾನ್ಯ ಲಿಂಗಂ ಈಶಾನ್ ಈಶಾನ್ಯನ್ ಬುಧ ನೆಮ್ಮದಿ ಹಾಗೂ ಮನಶ್ಶಾಂತಿ.

– ವಿ.ಎಂ.ಎಸ್.ಗೋಪಿ ✍
ಲೇಖಕರು ಬೆಂಗಳೂರು.

