“ನಿನ್ನ ಬರುವಿಕೆಗಾಗಿ ನಾ ಕಾದಿರುವೆ”…..

ಜಗವೆಲ್ಲ ಮಲಗಿದಾಗ!
ನೀನೊಬ್ಬನು ಎದ್ದಿದ್ದು ಸರಿಯೇ?
ಬಾಳ ದಾರಿಯಲ್ಲಿ ಸಂಗಾತಿಯಾಗಿ ಬಂದ
ಯಶೋಧರೆಯ ಬಿಟ್ಟು ಬಂದದ್ದು ಸರಿಯೇ?
ಅಂಗಲಾಚಿದ, ಕೈಮುಗಿದು ಬೇಡಿದ
ತಡೆದ ಕೈಗಳು ಇನ್ನು ಕೈಚಾಚಿಯೇ ಇವೆ
ಆಸೆ ಕಂಗಳಲಿ ನೂರೆಂಟು ಕನಸುಗಳ ಹೊತ್ತು
ನಿನ್ನ ಬರುವಿಕೆಗಾಗಿ ಕಾದ ಕಣ್ಣುಗಳು
ಬಿಟ್ಟಂತೆಯೇ ಇವೆ!
ಗುಡುಗು, ಮಿಂಚುಗಳು ಬಂದು ಹೋದವು
ಮಳೆ ತಾನೆ ಯಾರಿಗೇನಾದರೇನೆಂದು
ತಾ ಸುರಿದು ಹೋಯ್ತು
ಸುರಿದೀತೇ ಮತ್ತೊಮ್ಮೆ ಬಾಳಲ್ಲಿ ಮಳೆ
ನನ್ನ ಪ್ರೀತಿಯ ಸೊನೆ ಕಮರಿದರು ಚಿಂತೆಯಿಲ್ಲ
ಏನನರಿಯದ ಹಾಲುಗಲ್ಲದ ಹಸುಳೆ
ಮಾಡಿತ್ತೇನು ಅಪರಾಧ?
ಅಪ್ಪಾ…….. ಎಂದು ಕರೆವ ಮುನ್ನವೇ
ತೊದಲು ನುಡಿಗಳನು ಕೇಳಿಸದೆ
ಅಂಬೆಗಾಲಲಿ ನಡೆದು ಬೀಳುವಾಗ
ಮೇಲೇಳಿಸದೆ
ಬದುಕಿಗೆ ಬೆನ್ನು ತಿರುಗಿಸಿದ್ದು ಸರಿಯೇ?
ನಮ್ಮೆಲ್ಲ ಆಸೆಗಳ ಗೋರಿಗಳಿಗೆ ಹಾಕಿ
ಮುಚ್ಚಿದ್ದು
ಜಗದ ತೋಟದ ಹೂವುಗಳ ಅರಳಿಸಿದ್ದು
ಸರಿಯೇ?
ಕತ್ತಲು ಸರಿದು ಬೆಳಕು ಉದಯವಾದಂತೆ
ಮನದ ಮೂಲೆಯು ಜಾಗೃತಗೊಂಡು
ನೀ ಮಾಡಿದ್ದು ಸರಿಯೆನಿಸಿತು
ನನಗಿಂತ ನಮ್ಮ ಬಾಳ ಶ್ರೇಯಸ್ಸಿಗಿಂತ
ಜಗದ ಹಸಿವೇ ಮಿಗಿಲೆಂದು
ಆದರೂ…….ನಾ ಕಾದಿರುವೆ ನಿನ್ನ ನೆರಳಾಗಿ
ಹಿಂಬಾಲಿಸಲುl

– ಕೆ.ಎಸ್ ತಿಪ್ಪಮ್ಮ ನಾಗರಾಜು.
ಚಿತ್ರದುರ್ಗ. ದೂರವಾಣಿ
– 91106 78387

