ಕನ್ನಡ ಭಾಷೆಯಲ್ಲಿ ಪ್ರಬುದ್ಧತೆಯಿದ್ದರೇ ಸಾಕಷ್ಟು ಅವಕಾಶಗಳಿವೆ – ಸ್ವದೇಶ ಅಂಗಡಿ.
ಹುನಗುಂದ ಮೇ.05

ಕನ್ನಡ ಭಾಷೆಯ ಮೇಲೆ ಪ್ರಬುದ್ದತೆಯಿದ್ದರೇ ಸಾಕಷ್ಟು ಅವಕಾಶಗಳು ನಮ್ಮನ್ನು ಅರಿಸಿಕೊಂಡು ಬರುತ್ತವೆ ನಾನೇ ತಾಜಾ ಉದಾಹರಣೆ.ಅದರಲ್ಲೂ ಹಳೆಗನ್ನಡ ಮತ್ತು ಪೌರಾಣಿಕ ಚರಿತ್ರೆಯ ಬಗ್ಗೆ ಅರಿತು ಕೊಳ್ಳುವುದು ಅವಶ್ಯ ಎಂದು ಡ್ರಾಮಾ ಜೂನಿಯರ್ಸ ಖ್ಯಾತಿಯ ಬಾಲ ಪ್ರತಿಭೆ ಸ್ವದೇಶ ಎಂ.ಅಂಗಡಿ ಹೇಳಿದರು.ಪಟ್ಟಣದ ವಿಜಯ ಮಹಾಂತೇಶ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹುನಗುಂದ ತಾಲೂಕ ಘಟಕ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ೧೧೦ ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಮೊದಲಿನಿಂದಲೂ ಪೌರಾಣಿಕ ನಾಟಕದಲ್ಲಿ ಬಹಳಷ್ಟು ಆಸಕ್ತಿಯಿತು. ನಿರಂತರ ಪ್ರಯತ್ನದಿಂದ ಡ್ರಾಮಾ ಜುನಿಯರ್ಸ್ನಲ್ಲಿ ಅವಕಾಶ ಸಿಕ್ಕಿತು. ನಮ್ಮ ಭಾಷೆಯ ಬಗೆಗೆ ಅಭಿಮಾನ ಇರಲಿ, ಕನ್ನಡ ಸಂಪತ್ತ ಭರಿತ ಭಾಷೆಯಾಗಿದೆ, ಕನ್ನಡ ನಿರರ್ಗಳ ಮಾತುಗಳಿಂದ ನನಗೆ ಬಹಳಷ್ಟು ಪಾತ್ರಾಭಿನಯ ಅವಕಾಶಗಳು ನನಗೆ ದೊರಕಿದ್ದವು ಎಂದರು.ಸಾಹಿತಿ ಡಾ.ನಾಗರತ್ನಾ ಭಾವಿಕಟ್ಟಿ ಉಪನ್ಯಾಸ ನೀಡಿ ಮಾತನಾಡುತ್ತಾ ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸಲು, ನೆಲೆ, ಜಲ, ಭಾಷೆಯ ಸಂರಕ್ಷಣೆಗಾಗಿ ಹಾಗೂ ಕನ್ನಡ ಮನಸ್ಸುಗಳನ್ನು ಕೂಡಿಸುವ ಕನ್ನಡಿಗರ ಏಕ ಪ್ರಾತಿನಿಧಿಕ ಸಂಸ್ಥೆಯೇ ಕನ್ನಡ ಸಾಹಿತ್ಯ ಪರಿಷತ್ ಆಗಿದೆ.ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಗರನ್ನು ಒಂದು ಗೂಡಿಸಿ ಕನ್ನಡ ನಾಡು ಕಟ್ಟಲು ಸಾಹಿತಿಗಳು, ಹೋರಾಟಗಾರ ಶ್ರಮ ಅಪಾರವಾಗಿದೆ. ಕನ್ನಡದ ಕಂಪನ್ನು ಗಡಿಯಲ್ಲಿ ಬೆಳೆಸಲು ಕನ್ನಡ ಗಡಿನಾಡು ಘಟಕಗಳನ್ನು ಸ್ಥಾಪಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಮತ್ತು ಕೆಎಸ್ಆರ್ಟಿಸಿ ಸಹಯೋಗದಲ್ಲಿ ಜ್ಞಾನ ಪೀಠ ಪ್ರಶಸ್ತಿಯ ಸರಿ ಸಮಾನವಾದ ನೃಪತುಂಗ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಮಾತೃ ಭಾಷೆಯ ಬಗ್ಗೆ ಹೆಚ್ಚಿನ ಅಭಿಮಾನ ಇರಲಿ, ಅದರ ಜೊತೆಗೆ ಅನ್ಯ ಭಾಷೆಯನ್ನು ಪ್ರೀತಿಸಿ ಎಂದರು.ಡಾ. ಶಿವಗಂಗಾ ರಂಜನಗಿ ಮುಖ್ಯ ಅಥಿತಿಯಾಗಿ ಮಾತನಾಡಿ ಸಾಹಿತ್ಯ ಪರಿಷತ್ತು ಎಲೆಮರಿ ಕಾಯಿಯಂತೆ ಇರುವಂತ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಮಾಡುತ್ತಿದೆ. ಕನ್ನಡ ನೆಲ ಜಲ ವಿಷಯದಲ್ಲಿ ಸದಾ ಧ್ವನಿಯಾಗಿದೆ ಎಂದರು.ಕ.ಸಾ.ಪ ಅಧ್ಯಕ್ಷ ಮಲ್ಲಿಕಾಜುನ ಸಜ್ಜನ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಮಾದ್ಯಮಲ್ಲಿ ಕಲಿತು ಉನ್ನತ ಸಾಧನೆ ಮಾಡಬಹುದು, ಪ್ರತಿಭಾವಂತರಿಗೆ ವಿಫಲ ಅವಕಾಶಗಳಿವೆ ಸಾಹಿತ್ಯ ಪರಿಷತ್ತು ಪ್ರತಿಭೆಗಳನ್ನು ಗೌರವಿಸುವ ಕಾರ್ಯ ಮಾಡಲಿದೆ ಎಂದರು.ಈ ಸಂದರ್ಭದಲ್ಲಿ ಅಮೀನಗಡ ವಲಯ ಕ.ಸಾ.ಪ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಕ,ಸಾ,ಪ ಪ್ರತಿನಿಧಿ ಯೋಗೀಶ ಲಮಾಣಿ, ಇದ್ದರು.ಗೀತಾ ತಾರಿವಾಳ ಪ್ರಾರ್ಥನೆ, ಲಿಂಗರಾಜ ಗದ್ದನಕೇರಿ ಸ್ವಾಗತಿಸಿ, ಪ್ರಭು ಮಾಲಗಿತ್ತಿಮಠ ನಿರೂಪಿಸಿ, ಸಂಗಮೇಶ ಹೊದ್ಲೂರು ವಂದಿಸಿದರು.
“ಬಾಕ್ಸ್”—
ಗಮನ ಸೆಳೆದ ಸ್ವದೇಶಿ ಹಾಡು ಮತ್ತು ಡೈಲಾಗ್ ; ಡ್ರಾಮಾ ಜೂನಿಯರ್ಸ ಸೀಜನ್ ೫ ರ ಪ್ರತಿಭೆ ಸ್ವದೇಶಿ ರೆಂಬೆ ಕೊಂಬೆ ಮೇಲೆ ಗೂಡು ಕಟ್ಟಿದಾವ ಹಕ್ಕಿ ಹಾಡು, ಸಂಗ್ಯಾ ಬಾಳ್ಯಾ ದಪ್ಪಿ ನಾಟಕದ ಪದ, ಸಿಂಧೂರ ಲಕ್ಷ್ಮಣ ನಾಟಕದ ಡೈಲಾಗ್ ಪ್ರೇಕ್ಷಕರನ್ನು ರಂಜಿಸಿದವು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ