ಉಪ ಔಷಧ ನಿಯಂತ್ರಕರಿಂದ ನಿರಂತರ ಕಲಿಕಾ ಕಾರ್ಯಕ್ರಮ.

ಇಲಕಲ್ಲ ಸ.13

ಸಾರ್ವಜನಿಕರ ಆರೋಗ್ಯದ ಬಗ್ಗೆ ಔಷಧ ವ್ಯಾಪಾರಿಗಳು ಹೆಚ್ಚು ಕಾಳಜಿವಹಿಸ ಬೇಕಾದ ಅಗತ್ಯವಿದೆ, ವಿವೇಚನಾ ರಹಿತ ಔಷಧ ಮಾರಾಟವು ಜನ ಸಾಮಾನ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಔಷಧಗಳನ್ನು ತಿಳಿದು ಬಳಸುವ ಅಗತ್ಯವಿದೆ ಎಂದು ಬೆಳಗಾಂವ ವಿಭಾಗದ ಉಪ ಔಷಧನಿಯಂತ್ರರಾದ ಡಾ, ಎಸ್. ನಾಗರಾಜ ಅವರು ತಿಳಿಸಿದರು.

ಹುನಗುಂದ ಹಾಗೂ ಇಳಕಲ್ ತಾಲೂಕಾ ಔಷಧ ವ್ಯಾಪಾರಿಗಳಿಗಾಗಿ ಕಡಪಟ್ಟಿ ಫಾರ್ಮ ಹೌಸ್‌ನಲ್ಲಿ ನಿರಂತರ ಕಲಿಕಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಬಾಗಲಕೋಟೆ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ಶರಣಬಸಪ್ಪ ಹನಮನಾಳ, ಔಷಧ ಪರಿವೀಕ್ಷಕರಾದ ಅರುಣ ಕಠಾರಿ ಹಾಗೂ ಜನಪ್ರಿಯ ಹೃದಯ ರೋಗ ತಜ್ಞ ಡಾ. ಮಹಾಂತೇಶ ಕಡಪಟ್ಟಿ ಅವರು ಕಲಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಔಷಧ ವ್ಯಾಪಾರಿಗಳು ಹೊಸ ತಂತ್ರಜ್ಞಾನವನ್ನು ಅರಿತು ಬಳಸುವುದರಿಂದ ಪ್ರಯೋಜನವಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಘದ ಅಧ್ಯಕ್ಷರಾದ ಅಶೋಕ ಬಿಜ್ಜಳ ಅವರು ನಮ್ಮ ಔಷಧ ವ್ಯಾಪಾರಿಗಳು ಕಾನೂನಿಗೆ ಗೌರವ ನೀಡುತ್ತಾರೆ ಎಂದು ಹೇಳಿದರು. ಜಿಲ್ಲಾ ಸಂಘದ ಕಾರ್ಯದರ್ಶಿ ಆಗಿರುವ ಬಂಡು ಕಟ್ಟಿ ಅವರು ಮಾತನಾಡುತ್ತಾ ಔಷಧ ವ್ಯಾಪಾರಿಗಳು ಎದುರಿಸುವ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಡಾ. ಮಹಾಂತೇಶ ಕಡಪಟ್ಟಿಯವರು ಇತ್ತೀಚೆಗೆ ಹುನಗುಂದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದಕ್ಕಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಅಶೋಕ ಬಿಜ್ಜಳ ಅವರು ಸ್ವಾಗತ ಭಾಷಣ ಮಾಡಿದರು, ಡಾ. ಸಂತೋಷ ಪೂಜಾರ ಅತಿಥಿಗಳ ಪರಿಚಯ ಮಾಡಿದರು, ಪ್ರಭು ಬೀಳಗಿ ವಂದನಾರ್ಪಣೆ ಮಾಡಿದರು. ಗೋಪಾಲ ಢಗೆ ಪ್ರಾರ್ಥನಾ ಗೀತೆ ಹಾಡಿದರು, ಮಹಾಂತೇಶ ಹಳ್ಳೂರ ಕಾರ್ಯಕ್ರಮವನ್ನು ನಿರೂಪಿಸಿದರು. ವೇದಿಕೆಯ ಮೇಲೆ ಹುನಗುಂದ ಸಂಘದ ಅಧ್ಯಕ್ಷರಾದ ಅನ್ನದಾನಿ ಹಾದಿಮನಿ ಹಾಗೂ ಇಳಕಲ್ ಸಂಘದ ಶರಣಬಸಯ್ಯ ಗಣಾಚಾರಿ ಅವರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button