ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಮಹತ್ವದ್ದು – ಶ್ರೀಶಾರದಾಶ್ರಮದ ಸ್ವಯಂ ಸೇವಕ ಯತೀಶ್ ಎಂ ಸಿದ್ದಾಪುರ ಅಭಿಪ್ರಾಯ.
ಚಳ್ಳಕೆರೆ ಮೇ.19

ಪೂಜ್ಯ ಮಾತಾಜೀ ತ್ಯಾಗಮಯೀ ಅವರಿಂದ ದಿವ್ಯತ್ರಯರಿಗೆ ಮಂಗಳಾರತಿ
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಾಲೆಯ ಪಾತ್ರ ಅತ್ಯಂತ ಮಹತ್ವದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಹಾಗೂ ಲೇಖಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ವಾರದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಭಾಗವಹಿಸಿ ಭಜನೆ ನಡೆಸಿಕೊಟ್ಟ ಅವರು “ಶಾಲೆ ಜ್ಞಾನ ದೇಗುಲ” ಎಂಬ ವಿಷಯವಾಗಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಮುಗ್ಧ ಮಕ್ಕಳನ್ನು ಪ್ರಬುದ್ಧ ಪ್ರಜೆಗಳನ್ನಾಗಿ, ಬುದ್ಧಿವಂತ ಮನುಷ್ಯರನ್ನಾಗಿ ಪರಿವರ್ತಿಸುವ ಜ್ಞಾನ ವಿಕಾಸದ ಮಾಧ್ಯಮಗಳಾಗಿ ಶಾಲೆಗಳು ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತವೆ.

ವಿದ್ಯಾರ್ಥಿಗಳಾದವರು ಶಾಲೆಯಲ್ಲಿ, ತರಗತಿಯಲ್ಲಿ, ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿರ ಬೇಕು. ಶಿಸ್ತು ಬದ್ಧ ಜೀವನದ ನಿರ್ಮಾಣದಲ್ಲಿ ಶಾಲೆಯ ಕೊಡುಗೆ ಪ್ರಮುಖವಾದದ್ದು.

ಸಂಸ್ಕಾರ ಮತ್ತು ಸಂಸ್ಕೃತಿಯುತ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯವಿದ್ದು ಶಾಲೆಗಳು ಈ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಶಾಲೆಗಳು ಮಕ್ಕಳಲ್ಲಿ ಕುತೂಹಲ, ಧೈರ್ಯ, ಆತ್ಮವಿಶ್ವಾಸ, ಸ್ವಾತಂತ್ರ್ಯ, ಚುರುಕುತನ, ಕಲ್ಪನಾಶಕ್ತಿ, ಉತ್ಸಾಹ, ತಾಳ್ಮೆ, ದಕ್ಷತೆ ಹಾಗೂ ತಿಳಿವಳಿಕೆಯನ್ನು ನೀಡುವ ಪವಿತ್ರವಾದ ಜ್ಞಾನ ದೇಗುಲ ಎಂದು ಅವರು ಶಾಲೆಯ ವಿವಿಧ ವಿಶೇಷತೆಗಳ ಬಗ್ಗೆ ತಿಳಿಸಿದರು.
ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ
ಶಿಬಿರದ ಪ್ರಯುಕ್ತ ಮಕ್ಕಳಿಂದ ಧ್ಯಾನ, ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ, ಚೈತನ್ಯದಾಯಕ ನುಡಿಗಳು, ಚೇತನ್ ಕುಮಾರ್ ಅವರಿಂದ ವಿವಿಧ ಆಟಗಳು, ಅಮ್ಮಾ ಶಾರದಾಮಾತೆ ಹೇಳುವಿಕೆ, ಜೈಕಾರ, ಪ್ರಸಾದ ವಿನಿಯೋಗ ನಡೆಯಿತು.
ಜೈ ಜೈ ರಾಮಕೃಷ್ಣ ಹರಿ
ಕಾರ್ಯಕ್ರಮದಲ್ಲಿ ಮಾತಾಜೀ ತ್ಯಾಗಮಯೀ, ಡಾ, ಭೂಮಿಕಾ, ಮಾನ್ಯ, ಸಂತೋಷ್, ಲಕ್ಷ್ಮೀ, ಚರಣ್ಯ, ಸಹನಾ , ವಿವಿಕ್ತ, ಯಶಸ್, ವೈಷ್ಣವಿ, ವಿಷ್ಣು, ನಿಖಿಲೇಶ್ ಯಾದವ್, ಚಿರಣ್ಯ, ಜಶ್ವಿತಾ ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

